ಶುಕ್ರವಾರ, ಮಾರ್ಚ್ 11, 2016

ಶ್ರೀ ಕೃಷ್ಣ

ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. .    
   ಶ್ರಾವಣ ಮಾಸದ ಬಹುಳ ಅಷ್ಟಮಿ ಯ೦ದು ಹಿ೦ದೂಗಳು ಭಕ್ತಿಯಿ೦ದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದೊ೦ದು ಜನಪ್ರಿಯವೂ - ವರ್ಣರ೦ಜಿತವೂ ಆದ ಹಬ್ಬ. ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದು ಕರೆಯಲಾಗುತ್ತದೆ.ಈ ಹಬ್ಬವನ್ನು ಎರಡು ದಿನಗಳಲ್ಲಿ ಆಚರಿಸುತ್ತಾರೆ. ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ೦ದಗೋಪನ ಮನೆಯಲ್ಲಿ ಕ೦ಡ ಸ೦ಕೇತವಾಗಿ - ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ೦ಪ್ರದಾಯವಿದೆ.
   ಶ್ರೀ ಕೃಷ್ಣನು ದ್ವಾಪರ ಯುಗದಲ್ಲಿ ಭೂಭಾರವನ್ನಿಳಿಸಲು ಅವತರಿಸಿದನು. ದುಷ್ಟ ಶಿಕ್ಷಣ, ಶಿಷ್ಟ ಪರಿಪಾಲನೆ ಕೃಷ್ಣಾವತಾರದ ಮೂಲೋದ್ದೇಶ. ಶ್ರೀ ಕೃಷ್ಣ ಬೆಳೆದು ಕ೦ಸನನ್ನು ಕೊ೦ದನು. ದ್ವಾರಕೆಗೆ ರಾಜನಾಗಿ ಪಾ೦ಡವರನ್ನು ಕಾಪಾಡಿದನು. 
   ದ್ವಾಪರಯುಗದಲ್ಲಿ ಶಿಶುಪಾಲ - ದ೦ತವಕ್ರರಾಗಿ ಕೃಷ್ಣನಿಗೆ ಬ೦ಧುಗಳಾಗಿ ಹುಟ್ಟಿದರು. ಅವರಿ೦ದ ಭೂಲೋಕದಲ್ಲಿ ಅಧರ್ಮ ಹೆಚ್ಚಿ ಭೂಭಾರವಾಗಿತ್ತು. ಕೃಷ್ಣನು ಆ ಇಬ್ಬರನ್ನೂ ಕೊ೦ದು ಧರ್ಮವನ್ನು ಸ್ಥಾಪಿಸಿದನು. ಮು೦ದೆ ಪಾ೦ಡವರಿಗೂ ಕೌರವರಿಗೂ ರಾಜ್ಯಕ್ಕಾಗಿ ಕುರುಕ್ಷೇತ್ರ ಯುದ್ಧವಾದಾಗ ಅರ್ಜುನನ ರಥದ ಸಾರಥಿಯಾಗಿದ್ದು, ಶ್ರೀ ಕೃಷ್ಣನು ಪಾ೦ಡವರ ವಿಜಯಕ್ಕೆ ಕಾರಣನಾದನು. ರಣಭೂಮಿಯಲ್ಲಿ ಅರ್ಜುನನು ಯುದ್ಧ ಮಾಡಲಾರನೆ೦ದಾಗ ಅವನಿಗೆ ಗೀತೆಯನ್ನು ಬೋಧಿಸಿ ಗೀತಾಚಾರ್ಯನೆನಿಸಿದನು.
     ಶ್ರೀ ಕೃಷ್ಣನು ನಡುರಾತ್ರಿಯಲ್ಲಿ ಜನಿಸಿದ್ದನಾದ್ದರಿ೦ದ ಅಲ್ಲಿಯವರೆಗೂ ಉಪವಾಸವಿರುವ ಪದ್ಧತಿಯು೦ಟು. ಕೃಷ್ಣ ಹುಟ್ಟಿದನೆ೦ದು ಶುಭ ಸೂಚನೆಗಳಾಗಿ ಘ೦ಟಾನಾದಗಳು, ಶ೦ಖಗಳು ಮೊಳಗಿದಾಗಲೇ ಭಕ್ತರು ಆನ೦ದಪರವಶರಾಗುವರು. ಕೃಷ್ಣನ ವಿಗ್ರಹವನ್ನು ಶೃ೦ಗರಿಸಿ ತೊಟ್ಟಿಲಲ್ಲಿಟ್ಟು ತೂಗುವರು. ಎಲ್ಲಾ ವಿಷ್ಣು ಹಾಗೂ ಶ್ರೀ ಕೃಷ್ಣ ದೇವಾಲಯಗಳಲ್ಲಿ ವಿವಿಧ ಪೂಜೆ - ಪುನಸ್ಕಾರಗಳು ವಿಜೃ೦ಭಣೆಯಿ೦ದ ಜರುಗುತ್ತವೆ.ಶ್ರೀಕೃಷ್ಣನ ಅವತರಣ:ಶ್ರೀ ಕೃಷ್ಣನ ಅವತರಣವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೋಲಿಸಲಾಗಿದೆ. ಅಜ್ಞರು, ಸೂರ‍್ಯೋದಯವನ್ನು ಸೂರ್ಯನ ಹುಟ್ಟು ಎ೦ದೂ ಸೂರ್ಯಾಸ್ತವನ್ನು ಸೂರ್ಯನ ಸಾವು ಎ೦ದೂ ಹೇಳುವರು. ಆದರೆ ವಾಸ್ತವತೆ ಏನು ಎ೦ದರೆ, ಸೂರ್ಯನು ಹುಟ್ಟುವುದೂ ಇಲ್ಲ. ಮುಳುಗುವುದೂ ಇಲ್ಲ. ತಾನು ಇರುವ ಕಡೆಯೇ ಇರುತ್ತಾನೆ. ಭೂಮಿಯ ಸಾಪೇಕ್ಷ ಚಲನೆಯಿ೦ದಾಗಿ ಅವನ ಉದಯ - ಅಸ್ತ ಆಗುತ್ತವೆ. ಅ೦ತೆಯೇ ಕೃಷ್ಣನು ತನ್ನ ಸಾಕಾರ ರೂಪದಲ್ಲಿ ತನ್ನ ದಿವ್ಯ ಧಾಮದಲ್ಲಿ ಗೋಲೋಕ ವೃ೦ದಾವನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಅದೇ ಸಮಯದಲ್ಲಿ ಅವನು ತನ್ನ ಶಕ್ತಿಗಳ ಮೂಲಕ ಎಲ್ಲಾ ವಿಶ್ವಗಳ ಪ್ರತಿಯೊ೦ದು ಕಣದಲ್ಲೂ ಇದ್ದಾನೆ.
     ದ್ವಾಪರ ಯುಗದ ಏಳನೇ ಮನ್ವ೦ತರವಾದ ವೈವಸ್ವತ ಮನ್ವ೦ತರದಲ್ಲಿ, ಶ್ರಾವಣ ಮಾಸದ ಕೃಷ್ಣಪಕ್ಷದ, ರೋಹಿಣಿ ನಕ್ಷತ್ರದ ಅಷ್ಟಮೀ ತಿಥಿಯಲ್ಲಿ ಹುಟ್ಟುತ್ತಾನೆ. ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.
     ಸಣ್ಣ ಪುಟ್ಟ ಹುಡುಗರು ತಮ್ಮನ್ನು "ಗೋವಿಂದ" ಅಥವಾ "ಗೋಪಾಲ" ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು - ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು.
   ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ